Saturday, February 20, 2010

ನಟನೆ

ದೊಡ್ಡ ಪರದೆಯ ಮೇಲೆ ನಟನೆಯನ್ನು ನೋಡಿದಾಗ
ಅನ್ನಿಸಿದ್ದು
ದಿನ ನಿತ್ಯ ವಿವಿಧ ಮುಖವಾಡಗಳನ್ನು ಧರಿಸುವ
ಸಾಮಾನ್ಯ ಮನುಷ್ಯನ ಮುಂದೆ
ಈ ನಟ ನಟಿಯರು ಸಾಟಿಯೇ?

Monday, April 13, 2009

ಬ್ಲಾಗರ್

ನಾನು: ನನಗೆ ಬರೆಯೋದು ಇಷ್ಟ
ಅವರು: ಹೌದಾ? ಕವನಗಳನ್ನು ಬರಿದಿದ್ದೀರಾ?

ನಾನು: ಇಲ್ಲ
ಅವರು: ಹಾಗಾದರೆ ಕಥೆಗಳನ್ನು ಬರೆದಿರಬೇಕು

ನಾನು: ಇಲ್ಲ
ಅವರು: ಓಹ್! ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತೀರಾ?

ನಾನು: ಅಯ್ಯೋ, ಇಲ್ಲಾರೀ
ಅವರು: ಮತ್ತೆ ಇನ್ನೇನು ಬರೆಯೋಕಾಗತ್ಟೆ?!!!!!

ನಾನು: ಬ್ಲಾಗ್:)

Wednesday, February 04, 2009

ಸುಗಮ ಸಂಗೀತದ ಧ್ರುವ ತಾರೆ ಇನ್ನಿಲ್ಲ

ನಾನು ಈ ಅಂಕಣವನ್ನು ಬರೆಯಲು ತಡಮಾಡಿದೆ. ಯಾಕೆ ಅಂದರೆ ನನಗೆ ರಾಜು ಅನಂತಸ್ವಾಮಿ ಅವರ ಧಿಡೀರ್ ಮರಣದ ಸುದ್ದಿ ಶಾಕ್ ಆಗಿ ಬಂತು. ನಾನು ಅವರನ್ನು ಭೇಟಿ ಆಗಿರಲಿಲ್ಲ. ಆದರೆ ಅವರ ತಂದೆ ಹಾಗೂ ಅಕ್ಕನ ಭೇಟಿಯಾಗುವ ಸುಯೋಗ ಒದಗಿತ್ತು. ಮೊದಲಿನಿಂದಲೂ ಅವರ ಪರಿವಾರದ ಬಗ್ಗೆ ಗೌರವ ಇತ್ತು. ಮೈಸೂರು ಅನಂತಸ್ವಾಮಿ ಅವರ ನಂತರ ರಾಜು ಅವರು ಆ ಸ್ಥಾನವನ್ನು ತುಂಬಬಹುದು ಎಂಬ ನಿರೀಕ್ಷೆ ಇದ್ದದ್ದು ಸುಳ್ಳಲ್ಲ.

ಸುಗಮ ಸಂಗೀತ ಕ್ಷೇತ್ರದಲ್ಲಿ ರಾಜು ಅವರು ತಮ್ಮ ಸ್ವಂತ ಛಾಪನ್ನು ಮೂಡಿಸಿದ್ದರು. ಸಂಗೀತದಲ್ಲಿ ಬಹುಮುಖ ಪ್ರತಿಭೆಯುಳ್ಳವರು ಆಗಿದ್ದರು. ತಂದೆಯ ಹಾಡುಗಳನ್ನು, ರತ್ನಂ ಅವರ ಪದಗಳನ್ನು ಬಹಳ ಸುಲಲಿತವಾಗಿ ಹಾಡುತಿದ್ದರು. ಜೊತೆಯಲ್ಲಿ ಅವರದೇ ಆದ ಸಂಗೀತ ಸಂಯೋಜಿಸಿದ ಭಾವಗೀತೆಗಳನ್ನು ಕೂಡ ಹಾಡುತಿದ್ದರು, ಹಾಡಿಸುತ್ತಿದ್ದರು. ಚಿಕ್ಕಂದಿನಿಂದ ಸಂಗೀತದ ವಾತವರಣದಲ್ಲಿ ಬೆಳೆದ ಅವರಿಗೆ ಸಂಗೀತದ ಬಗ್ಗೆ ಅಪಾರ ಜ್ಞಾನವಿತ್ತು, ಪ್ರೀತಿಯಿತ್ತು. ಇತ್ತೀಚೆಗೆ ಸಿನಿಮಾ ಕ್ಷೇತ್ರದಲ್ಲಿ ಕೂಡ ಕಾಲಿಟ್ಟಿದ್ದರು.
ಇಂತಾ ಬಹುಮುಖ ಪ್ರತಿಭೆಯ , ನಗುಮುಖದ ರಾಜು ಅವರಿಗೆ ಸಾಯುವ ವಯಸ್ಸು ಖಂಡಿತ ಆಗಿರಲಿಲ್ಲ. ಅವರಿಂದ ಇನ್ನೂ ಬಹಳ ನಿರೀಕ್ಷೆ ಇತ್ತು. ಆದರೆ ಯಾವ ನೋವನ್ನು ಮರೆಯಲೋ ಏನೋ,ಅವರು ಕುಡಿತದ ದಾಸರಾಗಿದ್ದರಂತೆ. ಆ ಚಟವೇ ಅವರ ಅಂತ್ಯಕ್ಕೆ ಕಾರಣವಾಯಿತು. ಅವರ ಮರಣದ ಸುದ್ದಿ ಗೊತ್ತಾದಾಗ ನನಗೆ ಅನಿಸಿದ್ದು- ಕುಡಿತದ ಚಟ ಬದಲು ಅವರು ಸಂಗೀತವನ್ನೇ ಅವಲಂಬಿಸಿದ್ದರೆ, ಇನ್ನೂ ಹಲವು ವರ್ಷಗಳವರೆಗೂ ರಾಜು ಅವರ ಸಂಗೀತದ ಸುಧೆಯನ್ನು ನಾವು ಸವಿಯಬಹುದಾಗಿತ್ತೋ ಏನೋ!

ಅವರೇ ಸಂಗೀತ ಸಂಯೋಜಿಸಿದ ಹಾಡುಗಳಲ್ಲಿ ನಂಗೆ ಬಹಳ ಪ್ರಿಯವಾಗಿದ್ದು ಎರಡು ಹಾಡುಗಳು- "ಮುಂಗಾರು ಮೋಡ ಕವಿದಾಗ, ಸಿಂಗಾರಿ ನಿನ್ನ ನೆನಪಾಗ" ಮತ್ತು " ಈ ಒಲವ ಕವನ ನಿನಗೆ ಬಾ".ಈ ಹಾಡುಗಳಲ್ಲಿ ಅವರ ಕ್ರಿಯಾಶೀಲತೆ ಎದ್ದು ಕಾಣುತ್ತದೆ. ಇಂದು ಅವರು ನಮ್ಮ ಜೊತೆಗೆ ಇಲ್ಲ, ಆದರೆ ಅವರ ಹಾಡುಗಳು, ಅವರ ಮರೆಯಲಾಗದ ದನಿ ಎಂದೆಂದಿಗೂ ನಮ್ಮ ಜೊತೆ ಇರುತ್ತದೆ.

Tuesday, January 06, 2009

ಓ ನನ್ನ ಕಂದ

ತೊದಲು ನುಡಿಗಳ ಹೇಳುತ್ತಾ
ಮೆಲ್ಲ ಮೆಲ್ಲನೆ ನಡೆಯುತ್ತಾ
ನೀ ನನ್ನೆಡೆಗೆ ಬಂದಾಗ
ಮಮತಾಮಯಿ ಆಗುವೆನು ನಾನು
ಓ ನನ್ನ ಕಂದ

ಸುತ್ತಲಿರುವ ಪರಿಸರದ ಪರಿಚಯ ಮಾಡಿಕೊಳ್ಳುತ್ತಾ
ಏಳುತ್ತಾ ಬೀಳುತ್ತಾ ಪಾಠಗಳನ್ನು ಕಲಿಯುತ್ತಾ
ತನ್ನ ಬೇಕು-ಬೇಡಗಳನ್ನು ಅರಿಯುತ್ತಾ ನೀ ನಡೆದಾಗ
ನಿನ್ನ ಗುರು ಆಗುವೆನು ನಾನು
ಓ ನನ್ನ ಕಂದ

ಜಗತ್ತನ್ನು ವಿಸ್ಮಯದ ಕಣ್ಣಿಂದ ನೋಡುತ್ತಾ
ಭೇಧ ಭಾವಗಳಿಲ್ಲದ ಪ್ರೀತಿಯನ್ನು ಸುರಿಸುತ್ತಾ
ಕ್ಷಣದಲ್ಲಿ ನೋವ ಮರೆತು ಬೊಚ್ಚು ಬಾಯಿಯ ತೋರಿಸಿ ನೀ ನಕ್ಕಾಗ
ನಿನ್ನ ಶಿಷ್ಯೆ ಆಗುವೆನು ನಾನು
ಓ ನನ್ನ ಕಂದ


ಜೀವನದ ಪಥದಲ್ಲಿ ಸುಖ ಬಂದಾಗ, ನಿನ್ನ ಹಿಂದೆ
ಕಷ್ಟ ಬಂದಾಗ, ನಿನ್ನ ಮುಂದೆ
ದಾರಿ ಕಾಣದಾಗ ನಿನ್ನ ಜೊತೆಯಲ್ಲಿ
ಎಂದೆಂದೂ ಇರುವೆ ನಾನು
ಓ ನನ್ನ ಕಂದ








Thursday, November 06, 2008

ನೀ ಇರಲು ಜೊತೆಯಲ್ಲಿ

ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ
ಮನದೆ ಸಂತೋಷ ಹಾಡಾದಂತೆ

ಚಿತ್ರ : ಗುಣ ನೋಡಿ ಹೆಣ್ಣು ಕೊಡು
ಸಾಹಿತ್ಯ : ಆರ್. ಏನ್. ಜಯಗೋಪಾಲ್
ಸಂಗೀತ : ಎಲ್. ಎಂ. ರಂಗರಾವ್
ಹಾಡಿದವರು: ಎಸ್. ಪಿ. ಬಾಲಸುಬ್ರಮಣ್ಯಂ

ಬಹಳ ಇಂಪಾದ, ಮನಸ್ಸಿಗೆ ಹಿತ ಕೊಡುವ ಹಾಡು. ಸಾಹಿತ್ಯ ಎಷ್ಟು ಸರಳವಾಗಿದೆ. ಆದರೆ ಅಷ್ಟೆ ಆಳವಾಗಿದೆ. ನಿಷ್ಕಲ್ಮಶ ಪ್ರೀತಿಯನ್ನು ಕೊಡುವ ಬಾಳ ಸಂಗಾತಿ ಇದ್ದರೆ, ಇನ್ನೇನು ಬೇಕು? ರಂಗರಾವ್ ಅವರ ಸಂಗೀತ ಬಹಳ ಸುಮಧುರವಾಗಿದೆ. ನನಗೆ ಈ ಹಾಡು ಕೇಳಿದಾಗ, ಯಾವುದೋ ಹೂಬನದಲ್ಲಿ ಕೂತಂತೆ, ತಂಪಾದ ಗಾಳಿ ಬೀಸಿದಂತೆ ಅನುಭವವಾಗುತ್ತದೆ. ಎಸ್. ಪಿ ಅವರು ಹಾಡಿದ ಈ ಹಾಡು ನಮ್ಮನ್ನು ಬೇರೆ ಭಾವನಾಲೋಕಕ್ಕೆ ಕರೆದೊಯ್ಯುತ್ತದೆ. ನಟ ಶ್ರೀನಾಥ್ ಅವರ ಪತ್ನಿ ಗೀತ ಶ್ರೀನಾಥ್ ಗೆ, ತಮ್ಮ ಪತಿ ನಟಿಸಿದ ಹಾಡುಗಳಲ್ಲಿ ಇದು ಬಹಳ ಇಷ್ಟವಂತೆ.

ಸರಿ, ನಿಮ್ಮನ್ನು ಮನಮೆಚ್ಚಿದವರ ಜೊತೆ, ಈ ಹಾಡಿನ ಗುಂಗಿನಲ್ಲಿ ಮುಂದುವರೆಯಲು ಬಿಡುತ್ತೇನೆ. ಟಾಟಾ. :)

Tuesday, October 28, 2008

ಮಾತೃಭಾಷೆಯಲ್ಲಿ ಶಿಕ್ಷಣ

ಮಾತೃ ಭಾಷೆಯಲ್ಲಿ ಶಿಕ್ಷಣದ ಬಗ್ಗೆ ನಮ್ಮಲ್ಲಿ ಹಲವಾರು ಬಾರಿ ಚರ್ಚೆ ನಡೆದಿದೆ, ನಡೆಯುತ್ತಲೇ ಇರುತ್ತವೆ.
ಹೌದು, ಮಾತೃ ಭಾಷೆ ನಮ್ಮ ಶಿಕ್ಷಣದ ಅವಿಭಾಜ್ಯ ಅಂಗ ಆಗಿರಬೇಕು. ಆದರೆ ಮಾತೃ ಭಾಷೆಯೊಂದನ್ನೇ ಕಲಿಯಬೇಕು ಎಂಬುದು ಬಾವಿಯೊಳಗಿನ ಕಪ್ಪೆಯಂತೆ ಎಂಬುದು ನನ್ನ ಅನಿಸಿಕೆ. ಇಂದು ಇಡೀ ಜಗತ್ತೇ ಆಂಗ್ಲ ಭಾಷೆಯಲ್ಲಿ ವ್ಯವಹರಿಸುತ್ತಿದೆ. ಹೀಗಿದ್ದಾಗ ಉಳಿದ ಜಗತ್ತಿನ ಜೊತೆ ವ್ಯವಹಾರ ಮಾಡುವಾಗ ಆಂಗ್ಲ ಭಾಷೆ ಗೊತ್ತಿದ್ದರೆ ಉತ್ತಮ. ನಾವು ಮಾತೃ ಭಾಷೆಯೊಂದನ್ನೇ ಕಲಿತು, ಅಷ್ಟು ಸಮರ್ಪಕವಾಗಿ ವ್ಯವಹರಿಸಲಾಗದೆ ಕೀಳರಿಮೆ ಬೆಳೆಸಿಕೊಳ್ಳುವುದು ಏನು ನ್ಯಾಯ?

ನಮ್ಮ ಶಿಕ್ಷಣದಲ್ಲಿ -ಮಾತೃ ಭಾಷೆ ಮತ್ತು ಆಂಗ್ಲ ಭಾಷೆ -ಇವೆರಡಕ್ಕೂ ಒತ್ತಿರಲಿ. ಆಂಗ್ಲ ಭಾಷೆ ಕಲಿತ ತಕ್ಷಣ, ಮಾತೃ ಭಾಷೆ ಮರೆಯಬೇಕೆಂದೇನಿಲ್ಲವಲ್ಲ. ಮಾತೃ ಭಾಷೆಯನ್ನೂ ಪ್ರೀತಿಸುತ್ತ, ಆಧರಿಸುತ್ತ, ಆಂಗ್ಲ ಭಾಷೆಯನ್ನೂ ನಮ್ಮದಾಗಿಸಿಕೊಂಡು ನಡೆಯುವುದೇ ಜಾಣತನ ಎನ್ನುವುದು ನನ್ನ ಅಭಿಮತ.

Sunday, October 26, 2008

ಅಮ್ಮನೇ ಮೊದಲ ಗುರು

ಕನ್ನಡ ಬ್ಲಾಗ್ ಶುರು ಮಾಡಬೇಕೆಂಬುದು ತುಂಬ ದಿನದ ಆಸೆ. ಆದರೆ ಶುರು ಮಾಡಿದರೆ ಸಾಲದು, ಅದನ್ನು ಪೋಷಿಸಬೇಕು. ಇದನ್ನೇ ಕಾರಣಾಂತರದಿಂದ ಮಾಡಲಾಗಲಿಲ್ಲ. ಕ್ಷಮೆ ಇರಲಿ. ಇನ್ನು ಮುಂದಾದರೂ ಈ ಬ್ಲಾಗ್ನಲ್ಲಿ ಅಲ್ಪ ಸ್ವಲ್ಪ ಚಟುವಟಿಕೆ ಶುರು ಮಾಡಬೇಕೆಂದಿರುವೆ.:) ನನ್ನ ಪ್ರೌಢ ಶಾಲೆಯಲ್ಲಿ ICSE ಸ್ಟ್ಯಾಂಡರ್ಡ್ ಆಗಿದ್ದರಿಂದ, ಮೊದಲಿನ ಭಾಷೆ ಇಂಗ್ಲಿಷ್, ಎರಡನೇದು ಹಿಂದಿ ಹಾಗೂ ತ್ರಿತೀಯ ಭಾಷೆ ಕನ್ನಡವಾಗಿತ್ತು. ಹೀಗೆ ಸ್ಕೂಲಿನಲ್ಲಿ ಸ್ಟೇಟ್ಸ್ syllabus ಆದರೂ ಕೂಡ ಕನ್ನಡ ತ್ರಿತೀಯ ಭಾಷೆಯಲ್ಲಿಯೇ ಮುಂದುವರೆಯಿತು. ಹೀಗಾಗಿ ನನ್ನ ಶಿಕ್ಷಣದ ಬಗ್ಗೆ ಗೊತ್ತಿದವರಿಗೆ, ನಾನು ಕನ್ನಡ ಕಾದಂಬರಿಗಳನ್ನು ಓದುವಾಗ ಬಹಳ ಆಶ್ಚರ್ಯವಾಗುತ್ತಿತ್ತು. ಆಂಗ್ಲ ಮಾಧ್ಯಮದಲ್ಲಿ ಇದ್ದು ಕೊಂಡು ಕನ್ನಡವನ್ನು ಇಷ್ಟು ಓದಲು ಎಲ್ಲಿ ಕಲಿತೆ ಎಂದು ಕೇಳುತಿದ್ದರು.

ಮನೆಯೇ ಮೊದಲ ಪಾಠಶಾಲೆ, ಅಮ್ಮನೇ ಮೊದಲ ಗುರು ಅನ್ನುವುದು ನನ್ನ ಪಾಲಿಗೆ ಅಕ್ಷರಶಃ ಸತ್ಯ. ಶಾಲೆಯ ದಿನಗಳಿಂದ ಅಮ್ಮ ನನಗೆ ಕನ್ನಡದ ವಾರಪತ್ರಿಕೆ, ದಿನಪತ್ರಿಕೆಗಳನ್ನು ಓದಿ ಹೇಳುತಿದ್ದಳು ಹಾಗೂ ಓದಿಸುತ್ತಿದ್ದಳು. ಕನ್ನಡ ಚಲನಚಿತ್ರಗಳಿಗೆ ಹೋದಾಗ ಅದರಲ್ಲಿ ಬರುವ ಎಲ್ಲ ಉಪಾಧಿಗಳನ್ನು ಓದಿಹೇಳುತ್ತಿದ್ದಳು. ಹೀಗೆ ನಿಧಾನವಾಗಿ ಕಥೆಗಳನ್ನು, ಧಾರಾವಾಹಿಗಳನ್ನು ಓದಲು ಶುರು ಮಾಡಿದೆ. ಕಾಲೇಜಿಗೆ ಬರುವ ಹೊತ್ತಿಗೆ ಕಾದಂಬರಿಗಳನ್ನು ಓದುತಿದ್ದೆ. ಕನ್ನಡದ ಕವಿಗಳ ಬಗ್ಗೆ ಮಾಹಿತಿಯನ್ನು ಕೊಡುತಿದ್ದಳು ಅಮ್ಮ. ಆದ್ದರಿಂದ ಇಂದು ನನಗೆ ನನ್ನ ಮಾತೃಭಾಷೆಯ ಸಾಹಿತ್ಯದ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿದ್ದರೆ, ಅದಕ್ಕೆ ನನ್ನ ಅಮ್ಮನೇ ಕಾರಣ. ಹೌದು, ಅಮ್ಮನೇ ನನ್ನ ಮೊದಲ ಗುರು.